ನಿತ್ಯಪಾರಾಯಣಯೋಗ್ಯವಾದ 'ಚಂಡೀ', 'ಸೌಂದರ್ಯಲಹರೀ', 'ಶಿವಾನಂದ ಲಹರೀ' ಮುಂತಾದ ಪವಿತ್ರ ಸ್ತೋತ್ರಗಳ ಸಾಲಿನಲ್ಲೂ, ಕಾಳಿದಾಸ ಮೊದಲಾದ ವಿಶ್ವವಿಖ್ಯಾತ ಕವಿಗಳ ಕಾವ್ಯಗಳ ಸಾಲಿನಲ್ಲೂ ಗಣನೀಯವಾದ ಸ್ಥಾನದಲ್ಲಿ ನಿಲ್ಲುವ ಕೃತಿ 'ನಾರಾಯಣೀಯಮ್.' ಇದು ಒಂದು ಸುಂದರವಾದ ಮನಮೋಹಕ ಪದ್ಯಕಾವ್ಯವೂ ಹೌದು.ಈ ಕೃತಿಯ ಕರ್ತೃ ಮೇಪ್ಪತ್ತೂರು ನಾರಾಯಣ ಭಟ್ಟರಿ. ಇವರು ಮಹಾನ್ ಭಕ್ತರೂ, ಅಗಾಧ ಪಾಂಡಿತ್ಯ ಉಳ್ಳವರೂ ಆಗಿದ್ದರು, ಕೇರಳದ ನಂಬೂದಿರಿ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಗುರುವಾಯೂರು ಕೃಷ್ಣನ ಭಕ್ತರಾಗಿದ್ದ ಭಟ್ಟತ್ತಿರಿ 'ನಾರಾಯಣೀಯಮ್' ಕೃತಿಯ ಮೂಲಕ ಭಗವಂತನ ಉಪಾಸನೆಯನ್ನು ಮಾಡಿ ತಮಗೆ ಒದಗಿಬಂದಿದ್ದ ಪಾರ್ಶ್ವರೋಗವನ್ನು ನಿವಾರಿಸಿಕೊಂಡರು ಎನ್ನುತ್ತಾರೆ.ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧವಾದ ಕೃತಿಗಳೊಡನೆ ಹೋಲಿಸಬಹುದಾದ ಸಮಸ್ತ ಕಾವ್ಯಗುಣಗಳನ್ನು ಒಳಗೊಂಡಿರುವುದರಿಂದಲೂ, ಭಕ್ತಿಯ ಪರಾಕಾಷ್ಠೆಯಿಂದ ಕೂಡಿ ಇತರ ಸ್ತೋತ್ರ, ಕಾವ್ಯಗಳಿಂದ ವಿಶಿಷ್ಟವೂ ಭಿನ್ನವೂ ಆಗಿರುವುದರಿಂದಲೂ, ಭಕ್ತಿ, ನೀತಿ, ಧರ್ಮಗಳ ಉಪದೇಶದೊಂದಿಗೆ ವೇದಾಂತ ತತ್ತ್ವವನ್ನು ಪ್ರತಿಪಾದಿಸುವು ದರಿಂದಲೂ ಈ ಕೃತಿ ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿದೆ. ಅನುಪಮ ಸೌಂದರ್ಯ, ರಸಭಾವಗಳಿಂದ ಈ ಕೃತಿ ಸಹೃದಯರನ್ನು ಸೆರೆಹಿಡಿದು ನಿಲ್ಲಿಸುತ್ತವೆ.
© 2026 Vivek Store. All rights reserved.